Thursday, June 25, 2009

ಅಡಿಗರ ’ಮೋಟುಗೋಡೆ’ ಕವನ

ಗೋಪಾಲ ಕೃಷ್ಣ ಅಡಿಗರ ವಿರುದ್ಧ ಡಿ.ವಿ.ಗುಂಡಪ್ಪನವರು ಜಗಳ ಮಾಡಲು ಒಂದು ಕಾರಣವಿತ್ತು. 1957ರಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾದ ಅಡಿಗರ ಒಂದು ಕವನವು ಎಲ್ಲೆ ಮೀರಿದ ಅಶ್ಲೀಲತೆಯಿಂದ ಕೂಡಿದೆಯೆಂದು ಡಿ.ವಿ.ಜಿ.ಯ ಅಭಿಪ್ರಾಯ. ಅಡಿಗರ ವಿರುದ್ಧ ಕೋರ್ಟಿನಲ್ಲಿ ಕೇಸು ಹಾಕುವವರೆಗೂ ಹೋಗಿದ್ದರಂತೆ ಗುಂಡಪ್ಪನವರು. ವಾಸ್ತವದಲ್ಲಿ ಡಿ.ವಿ.ಜಿ ಕೂಡ ಅನೇಕ ’ಶೃಂಗಾರ’ ಕವನಗಳನ್ನು ನಮಗೆ ಕೊಟ್ಟಿದ್ದಾರಾದರೂ, ವಯಕ್ತಿಕವಾಗಿ ಅವರೂ ಸಹ ನಮ್ಮ ’ಮೋಟುಗೋಡೆ’ಗಿಂತಲೂ ಒಂದು ಹೆಜ್ಜೆ ಮೀರಿದ ಚರ್ಚೆಗಳಲ್ಲಿ ತೊಡಗಿದ್ದಾರಾದರೂ ಪತ್ರಿಕೆಗಳಲ್ಲಿ ಪ್ರಕಟವಾಗುವ ಕವನಗಳಿಗೆ, ಅಂಕಣಗಳಿಗೆ ಒಂದು ಮಿತಿಯಿರುತ್ತೆಂದು ನಂಬಿದ್ದವರು. ಮತ್ತು ಆ ಮಿತಿಯನ್ನು ದಾಟಿದವರ ಬಗ್ಗೆ ಗೌರವವೂ ಇಟ್ಟುಕೊಳ್ಳುವುದಿಲ್ಲ ತಾವೆಂದು ಕೆಂಡಾಮಂಡಲವಾಗಿ ಗುಡುಗಿದ್ದವರು.

ಅಡಿಗರೆಂದರೆ ನಮಗೆ ನೆನಪಿಗೆ ಬರುವ ಕೇವಲ ’ಯಾವ ಮೋಹನ ಮುರಲಿ’ಯೋ ’ಅಮೃತವಾಹಿನಿ’ಯೋ, ’ಅಳುವ ಕಡಲೊಳು’ನೋ, ’ಮೌನ ತಬ್ಬಿತು ನೆಲವ ಜುಮ್ಮೆನೆ’ಯೋ ಅಲ್ಲದೆ, ಶಾಶ್ವತವಾಗಿ ಕುವೆಂಪುರವರ ವೈರುಧ್ಯದಲ್ಲಿದ್ದ ಅಡಿಗರಿಗೆ ಡಿ.ವಿ.ಜಿ.ಯವರ ವೈರುಧ್ಯವನ್ನೂ ಗಳಿಸಿಕೊಟ್ಟ ಒಂದು ’ಪ್ರಾರ್ಥನೆ’ಯೂ ಇದೆ!

ಕವನದ ಗಾತ್ರವು ದೊಡ್ಡದಾಗಿರುವುದರಿಂದ ಇಲ್ಲಿ ಪ್ರಕಟಿಸುತ್ತಿಲ್ಲ. ಅದರ PDF ಇಲ್ಲಿದೆ, ಕ್ಲಿಕ್ಕಿಸಿ ಕವನವನ್ನು ಓದಿಕೊಳ್ಳಿ.

(ಮೇಲಿನ ಘಟನೆಗೆ ಮೂಲವು ಪ್ರೊ.ಅ.ರಾ.ಮಿತ್ರ ಅವರ ಒಂದು ಉಪನ್ಯಾಸ)

Wednesday, June 10, 2009

ಬೇಸಗೆ ರಜೆಯಲ್ಲಿ ಮೈನೆರೆದ ಹುಡುಗಿಗೆ..

ಜೂನ್! ಶಾಲೆ-ಕಾಲೇಜುಗಳು ಶುರುವಾಗಿವೆ. ಎಂಟನೇ ಕ್ಲಾಸಿನಲ್ಲಿದ್ದ ಹುಡುಗಿಗೆ ಒಂಭತ್ತನೇ ಕ್ಲಾಸಿಗೆ ಭಡ್ತಿ ಸಿಕ್ಕಿದೆ. ಎರಡು ತಿಂಗಳ ಬೇಸಗೆ ರಜೆ ಮುಗಿಸಿ ಬಂದ ಆ ಹುಡುಗಿ, ಅರೆ! ಇದೇನಿದು ಅವಳಲ್ಲಿ ಇಂತಹ ಬದಲಾವಣೆ! ಅಚ್ಚರಿಯಲ್ಲಿ ನಿರುಕಿಸುತ್ತಿದ್ದಾನೆ ಹುಡುಗ: ಬರೀ ಮುಗ್ಧತೆ ಮಿಂಚುತ್ತಿದ್ದ ತನ್ನ ಪ್ರೀತಿಯ ಹುಡುಗಿಯ ಮೊಗದಲ್ಲೀಗ ಏನಿದು ಹೊಸ ಕಳೆ? ಏಕೀ ನಾಚಿಕೆ? ತನಗೂ ನೋಡಲು ಅಂಜಿಕೆ? ರಜೆಯಲ್ಲವಳು ಮೈನೆರದಳೇ?

ಗಂಗಾಧರ ಚಿತ್ತಾಲರ ಮತ್ತೂ ಒಂದು ಕವನ ಮೋಟುಗೋಡೆಯ ಮೆಟ್ಟಿಲೇರುತ್ತಿದೆ. ಕಂಗಳ ಸೆಳೆಯುವ ತರಳೆಯರಿಗೆಲ್ಲ ಹೊಟ್ಟೆನೋವು ಬರಲಿ!


ಕಾಮೋದಯ

ಬೆಳೆದು ನಿಂತಿಹೆ ಹುಡುಗಿ!
ಕಂಡು ಕಂಡವರ ಎದೆ ಸೆಳೆದು ನಿಂತಿಹೆ ಮತ್ತೆ
ಎಳೆತನದ ಹೂವುಕಳೆ ಕಾಣಕಾಣುತೆ ಅಡಗಿ
ಕಾಮೋದಯದ ಉಷೆಯೆ ಮೈದಾಳಿ ಬಂದಂತೆ
ನಯನಾಭಿರಾಮವಾಗಿ!

ಇದು ಒಂದು ಋತುಮಾನ
ಹರೆಯು- ಬಂದರೆ ನೆರೆಯೆ ಬಂದಂತೆ ಮೈಮನಕೆ
ತೊನೆಯುತಿದೆ ಕಣ್ಗಳಲಿ ಬರುವ ಸುಗ್ಗಿಯ ತಾನ!
ನಿಲುವಿನಲಿ ಯಾರನೋ ಕಾದು ನಿಂತಿಹ ಭಾವ
ಸುಳಿವುದವಿರಾಮವಾಗಿ!

ಏ ತರಳೆ! ಏ ಮರುಳೆ!
ಸ್ವಾತಿ ಬರೆ ಮೌಕ್ತಿಕಕೆ ಶುಕ್ತಿ ಬಾಯ್ಬಿಡುವಂತೆ
ಜೀವದಾಳವೆ ಬಾಯ ಬಿಟ್ಟಿರಲು ಬಯಕೆಯಲಿ
ಮುಗ್ದೆ ಚಂಚಲೆಯಾಗಿ ಭುಲ್ಲವಿಸಿ ನಿಂತಿರುವೆ
ಕಾಮವೇ ಪ್ರೇಮವಾಗಿ!

Wednesday, June 3, 2009

ಹೀಗೊಂದು ’ವಸ್ತು’ ಸಂಗ್ರಹಾಲಯ

ವಿಷಯ ಏನೂಂತ ಆದಷ್ಟೂ ನೇರವಾಗಿ ಹೇಳಿಬಿಡ್ತೇವೆ. ಸೋಮಾರಿ ಕಟ್ಟೆ ಅಂತ ಒಂದು ಕನ್ನಡ ಬ್ಲಾಗು. ಅದರ ರೂವಾರಿ ಶಂಕರ ಪ್ರಸಾದ್ ಅಲಿಯಾಸ್ ಕಟ್ಟೆ ಶಂಕ್ರು ಅಲಿಯಾಸ್ ಸೋಮಾರಿ ಶಂಕ್ರಣ್ಣ. ಈ ಮನುಷ್ಯನ ಕೈಯಲ್ಲಿ ಯಾವಾಗಲೂ ಒಂದು ಮೊಬೈಲು. ಆ ಮೊಬೈಲಿಗೆ ಒಂದು ಕ್ಯಾಮೆರಾ. ಮನೆಯಿಂದ ಆಫೀಸಿಗೆ ಹೋಗಬೇಕಾದ್ರೆ, ಆಫೀಸಿಂದ ಮನೆಗೆ ಬರ್ಬೇಕಾದ್ರೆ ಅಥ್ವಾ ಹೆಂಡತಿ ಜೊತೆ ಶಾಪಿಂಗ್‌ಗೆ ಹೋಗ್ಬೇಕಾದ್ರೆ, ಹೀಗೆ ಸದಾ ಕಾಲ ಆ ಮೊಬೈಲಿನ ಕ್ಯಾಮೆರಾ ಫೋಟೋ ತೆಗೀಲಿಕ್ಕೆ ಕಾಯ್ತಾ ಇರತ್ತೆ. ರಸ್ತೆಯಲ್ಲಿ ಒಂದು ಹಳದಿ ಬಣ್ಣದ ಸೀರೆಯುಟ್ಟ ಕಪ್ಪು ಆಟೋ ಪಾಸಾದದ್ದು ಕಂಡಿತೋ, ತಕ್ಷಣ ಈ ಕ್ಯಾಮೆರಾ ಅಲರ್ಟ್ ಆಗುತ್ತೆ. ಆ ಆಟೋದ ಹಿಂದೆ ಏನು ಬರೆದುಕೊಂಡಿದೆ ಅಂತ ಗಮನಿಸುತ್ತೆ. ಏನಾದ್ರೂ ಆಣಿಮುತ್ತಿನಂತಹ ಮಜಾ ವಾಕ್ಯ ಬರ್ಕೊಂಡಿರೋದು ಕಾಣಿಸ್ತೋ, ತಕ್ಷಣ ಇದು ಕ್ಲಿಕ್ ಆಗುತ್ತೆ! ನಂತರ ಹಾಗೆ ಕ್ಲಿಕ್ ಆದ ಫೋಟೋ, ಮೊಬೈಲಿನ ಮೆಮೋರಿ ಕಾರ್ಡಿನಿಂದ ಶಂಕ್ರುವಿನ ಲ್ಯಾಪ್‌ಟಾಪಿಗೆ ಬರುತ್ತೆ. ಲ್ಯಾಪ್‌ಟಾಪಿನಿಂದ ಸೋಮಾರಿ ಕಟ್ಟೆ ಬ್ಲಾಗಿಗೆ!

ಇಂತಹ ಪ್ರಕ್ರಿಯೆಗೆ ಒಳಗಾಗಿ ಅದೆಷ್ಟೋ ಬೆಂಗಳೂರ ಆಟೋಗಳು ಈ ಬ್ಲಾಗಿನಲ್ಲಿ ತಮ್ಮ ಬೆನ್ನಿನ ಪ್ರದರ್ಶನ ಕೊಟ್ಟಿವೆ. ನಮ್ಮ ಬ್ಯುಸಿಯ ದಿನಗಳ, ಸೀರಿಯಸ್ ಡಿಸ್ಕಷನ್ನುಗಳ ನಡುವೆ ಒಂದು ಕ್ಷಣ ರಿಲಾಕ್ಸ್ ಆಗಲಿಕ್ಕೆ, ಸಣ್ಣ ನಗೆ ಚಿಮ್ಮಿಸಲಿಕ್ಕೆ ನೆರವಾಗಿವೆ.

ಸರಿ, ಈ ಇಂತಹ 'ಆಟೋರಾಜ', ನಮ್ಮೆಲ್ಲರ ಪ್ರೀತಿಯ ಶಂಕ್ರಣ್ಣ, ಕಂಪನಿಯ ಕೆಲಸದ ಮೇಲೆ ನೆದರ್‌ಲ್ಯಾಂಡ್ಸಿಗೆ ಹೋಗಬೇಕಾಗಿ ಬಂತು. ಅಲ್ಲಿಗೆ ಹೋಗಬೇಕಾದರಾದರೂ ತನ್ನ ಕ್ಯಾಮೆರಾ ಇರುವ ಮೊಬೈಲ್ ಬಿಟ್ಟು ಹೋದನೇ? ಇಲ್ಲ! ಅದರ ಪರಿಣಾಮವಾಗಿ ನೆದರ್‌ಲ್ಯಾಂಡ್ಸ್‌ ದೇಶದ ಅಪ್ರತಿಮ ಟಾಯ್ಲೆಟ್ ಫೋಟೋಗಳು ನಮಗೆ ಸಿಕ್ಕವು!

ಇಷ್ಟೇ ಆಗಿದ್ದರೆ ನಾವು ಇದನ್ನೆಲ್ಲ ಇಲ್ಲಿ ಬರೆಯುತ್ತಿರಲಿಲ್ಲವೇನೋ? ಆದರೆ ಶಂಕ್ರಣ್ಣ ಈಗ ಆಮ್‌ಸ್ಟರ್‌ಡ್ಯಾಮಿನಲ್ಲಿ ತಾನು ಗೆಳೆಯನೊಂದಿಗೆ ಭೇಟಿ ಕೊಟ್ಟ ಒಂದು 'ವಸ್ತು' ಸಂಗ್ರಹಾಲಯದ ಚಿತ್ರಗಳನ್ನು ಮೋಟುಗೋಡೆಗೆ ಕಳುಹಿಸಿಕೊಟ್ಟಿದ್ದಾನೆ. ಶಂಕ್ರಣ್ಣನಿಗೊಂದು ಥ್ಯಾಂಕ್ಸ್ ಹೇಳುತ್ತಾ, ಅಲ್ಲಿಗೆ ಹೋಗಿ 'ಸೇಫಾಗಿ' ವಾಪಸ್ ಬಂದದ್ದಕ್ಕೆ ಅಭಿನಂದನೆ ಹೇಳುತ್ತಾ, ಆ ಫೋಟೋಗಳನ್ನು ಇಲ್ಲಿ ಕೊಡುತ್ತಿದ್ದೇವೆ; ಆನಂದಿಸಿ!