Wednesday, July 28, 2010

ಮಳೆಗಾಲದೀ ಚಳಿಗೆ..

ಹೊರಗೆ ಧಾರೆ ಧಾರೆ ಮಳೆ.. ಕಪ್ಪಿಟ್ಟ ಮುಗಿಲು.. ತೊಯ್ದು ಬಂದ ಹುಡುಗಿಯ ನಡುಗುವ ಮೈ.. ಇಂಥ ಮಳೆಗಾಲದಿಂಥ ಚಿತ್ರ ಕವನವಾದರೆ? ರಸಋಷಿಗೆ ನಮೋನಮಃ!


ಕೀಲಿಕೈ ಎಲ್ಲಿಹುದು?
-ಕುವೆಂಪು

ಕೀಲಿಕೈ ಎಲ್ಲಿಹುದು ಬಾಗಿಲನು ತೆರೆಯೆ?
ಓ ದ್ವಾರಪಾಲಕನೆ, ಎಲ್ಲಿ ಹೋಗಿರುವೆ?

ದೂರದಿಂ ಬಂದಿಹೆನು; ಬಲು ಬಳಲಿ ನೊಂದಿಹೆನು;
ಕತ್ತಲಲಿ ಸೋತಿಹೆನು ದಾರಿ ನಡೆದು!
ಮುಳ್ಳುಕಲ್ಲನು ತುಳಿದು, ಹಳ್ಳಕೊಳ್ಳವ ಕಳೆದು,
ತುಂಬಿ ಹರಿಯುವ ಹೊಳೆಯ ಹಾದುಬಂದೆ!

ಮುಂಗಾರುಮಳೆಗರೆದು ಚಳಿಯ ತಣ್ಪೇರುತಿದೆ;
ಮೈಗಂಟಿಕೊಂಡಿರುವುದುಟ್ಟ ಸೀರೆ!
ಕೇಶಪಾಶವು ತೊಯ್ದು ಮುಡಿಗೆದರಿಕೊಂಡಿಹುದು;
ಕಂಪಿಪುದು ಕೋಮಲೆಯ ಕುಸುಮ ಕಾಯ!

ಬಿರುಗಾಳಿ ಬೀಸುತಿದೆ; ಕುಡಿಮಿಂಚು ತಳಿಸುತಿದೆ;
ಸಿಡಿಲೆರಗಿ ಬಾನೆಲ್ಲ ಕೆರಳಿರುವುದು!
ಹೊರಗೆಲ್ಲಿಯೂ ಮಲಗೆ ಬೆಚ್ಚನೆಯ ತಾವಿಲ್ಲ;
ತಿಮಿರ ಭಯ ಹೃದಯದೊಳು ಹರಿಯುತಿಹುದು!

ಮಲಗಿರುವನೆನ್ನಿನಿಯನೊಳಗೆ ಬಿಸುಸಜ್ಜೆಯಲಿ;
ಕರೆದರೂ ಕೇಳಿಸದು. ಗುಡುಗುತಿಹುದು!
ಚಳಿಯಿಂದ ಪಾರಾಗುವೆನು ರಮಣನೆಡೆ ಸೇರಿ:
ತೊಯ್ದುಡುಪಿಗಿಂತ ನಗ್ನತೆಯೆ ಲೇಸು!

ಕತ್ತಲಲಿ ಬಂದಿರುವೆ; ತಾಯ್ಮನೆಯನಗಲಿರುವೆ;
ತೊಯ್ದು ಮಳೆಯಲಿ ಕದವ ತಟ್ಟುತಿರುವೆ!
ಬಾಗಿಲನು ಕಾಯದೆಯೆ ನೀನೆಲ್ಲಿ ಹೋಗಿರುವೆ?

ಓ ದ್ವಾರಪಾಲಕನೆ, ಬೇಗ ಬಾರೈ.

7 comments:

sunaath said...

ಇವರು ರಸಿಕ ಋಷಿ!

Manu said...

ತುಂಬಾ ಚೆನ್ನಾಗಿದೆ!! ರಸಋಷಿಗೆ ನಮೋನಮಃ

Subrahmanya said...

ರೊಮ್ಯಾಂಟಿಕ್ !. ಆ ಕವಿಗೆ ನಮನ.

ಸೀತಾರಾಮ. ಕೆ. / SITARAM.K said...

ಚೆಂದದ ಕವನ

balasubramanya said...

ರಸಿಕತೆ ಕಾವ್ಯವಾಗಿ ಹೊಮ್ಮಿದೆ.

ದಿನಕರ ಮೊಗೇರ said...

soopar kavana........rasarushige namanagaLu....

ಅನಂತ್ ರಾಜ್ said...

ಮಳಗಾಲ ನೆನಪಿಸುವ ಸು೦ದರ ಕವನ.

ಅನ೦ತ್