Tuesday, January 11, 2011

ಕುಮಾರವ್ಯಾಸನ ದ್ರೌಪದಿ

ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದೇ ಕರೆಯಲ್ಪಡುವ ಗದುಗಿನ ನಾರಣಪ್ಪ, ಭಾಮಿನಿ ಷಟ್ಪದಿಯಲ್ಲಿ ಮಹಾಭಾರತವನ್ನು ರಚಿಸಿ ಕುಮಾರವ್ಯಾಸನಾದವನು. ಅವನ ಕರ್ಣಾಟ ಭಾರತ ಕಥಾಮಂಜರಿ ಇವತ್ತಿಗೂ ಓದುಗರಿಗೆ ರೋಮಾಂಚನವನ್ನುಂಟುಮಾಡುವ ಕೃತಿ. ಗಮಕಗಾಯನದಲ್ಲಿ ಅದನ್ನು ಕೇಳುವಾಗ ಶ್ರೋತೃಗಳಿಗೆ ಮೈನವಿರೇಳುತ್ತದೆ. "ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು! ಭಾರತ ಕಣ್ಣಲಿ ಕುಣಿಯುವುದು! ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು!" ಎಂದು ಕುವೆಂಪು ಅವನನ್ನು ಹೊಗಳಿದ್ದಾರೆ.

ಕುಮಾರವ್ಯಾಸನ ಭಾರತದಲ್ಲಿ ಶೃಂಗಾರ ರಸಗಳೂ ಮೇಳೈಸಿಕೊಂಡಿವೆ. ಇದೀಗ, ಮೋಟುಗೋಡೆಯಲ್ಲಿ ನಿಂತಿರುವ ನಾವು, ಕುಮಾರವ್ಯಾಸನ ಶೃಂಗಾರಮೀಮಾಂಸೆಯ ಪರಿಯನ್ನು ನೋಡುವರಾಗೋಣ!

* *
ಪಾಂಚಾಲ ದೇಶದ ಅರಮನೆಯಲ್ಲಿ ದ್ರೌಪದಿಯ ಸ್ವಯಂವರ ನಡೆಯುತ್ತಿದೆ. ನಾನಾ ದೇಶದ ಅರಸುಗಳು ನೆರೆದಿದ್ದಾರೆ. ಕಿಕ್ಕಿರಿದ ಅರಮನೆಯ ಸಭಾಂಗಣದಲ್ಲಿ ನಡೆದು ಬರುವ ಕೃಷ್ಣೆಯ ರೂಪನ್ನು ಕುಮಾರವ್ಯಾಸ ಬಣ್ಣಿಸುವ ಬಗೆ ಹೀಗಿದೆ:

ಮೊಲೆಗಳಲಿ ಸಿಲುಕಿದೊಡೆ ನೋಟಕೆ
ಬಳಿಕ ಪುನರಾವರ್ತಿಯೇ ಕಂ
ಗಳಿಗೆ ಕಾಮಿಸಿದರೆಯು ನಿಮಿಷಕೆ ಸಮಯವೆಲ್ಲಿಹುದು
ಲಲಿತ ಮೈಕಾಂತಿಗಳೊಳದ್ದರೆ
ಮುಳುಗಿ ತೆಗೆವವರಾರು ಜಘನ
ಸ್ಥಳಕೆ ಮುರಿದರೆ ಮರಳದಲೆ ಕಂಗಳಿಗೆ ಹುಸಿಯೆಂದ

ಅಸಿಯ ನಡುವಿನ ನಿಮ್ನ ನಾಭಿಯ
ಮಸುಳ ಬಾಸೆಯ ತೋರ ಮೊಲೆಗಳ
ಮಿಸುಪ ತೊಡೆಗಳ ಚಾರು ಜಂಘೆಯ ಚರಣಪಲ್ಲವದ
ಎಸಳುಗಂಗಳ ತೊಳಗಿ ಬೆಳಗುವ
ಮುಸುಡ ಕಾಂತಿಯ ಮುರಿದ ಕುರುಳಿನ
ಬಿಸಜ ಗಂಧಿಯ ರೂಪನಭಿವರ್ಣಿಸುವಡಿರೆಂದ

ದ್ರೌಪದಿಯೊಂದಿಗಿರುವ ಸಖಿಯರಾದರೂ ಅಲ್ಪಸುಂದರಿಯರೇ? ಊಹುಂ!

ತೋರ ಮೊಲೆಗಳ ನಲಿವನಡು ಪೊರ
ವಾರಗಳ ನುಣ್ದೊಡೆಯ ಕಿರುದೊಡೆ
ಯೋರಣದ ಹಾವುಗೆಯ ಹೆಜ್ಜೆಯ ಹಂಸೆಗಳ ಗತಿಯ
ನೀರೆಯರ ಮೈಗಂಪುಗಳ ತನಿ
ಸೂರೆಗೆಳಸುವ ತುಂಬಿಗಳ ಕೈ
ವಾರಗಳ ಕಡು ಗರುವೆಯರ ನೆರೆದುದು ಸಖೀನಿವಹ

ತೋರ ಮೊಲೆಗಳ ದಂತಿ ಘಟೆಗಳ
ಚಾರು ಜಘನದ ಜೋಡಿಸಿದ ಹೊಂ
ದೇರುಗಳ ಸುಳಿಗುರುಳುಗಳ ಝಲ್ಲರಿಗಳ ಝಾಡಿಗಳ
ಚಾರುನಯನದ ಚಪಲಗತಿಗಳ
ವಾರುವಂಗಳ ಮೇಲುವಸನದ
ಸಾರಸಿಂಧದ ಸೇನೆ ನಡೆದುದು ಸತಿಯ ಬಳಸಿನಲಿ

ಇಂತಹ ಸುಂದರಿಯನ್ನು ಅರ್ಜುನ ಗೆಲ್ಲುತ್ತಾನೆ. ದ್ರೌಪದಿ ವೀರ ಪಾಂಡವರ ಸತಿಯಾಗುತ್ತಾಳಾದರೂ ಜೀವಿತದುದ್ದಕ್ಕೂ ಕೊರಗುಗಳನ್ನನುಭವಿಸುತ್ತಿರುತ್ತಾಳೆ. ಮೊದಲೇ ಐವರು ಪತಿಯರನ್ನು ಸಂಭಾಳಿಸಬೇಕಾದ ಕಷ್ಟ. ಅರ್ಜುನನ ಮೇಲೆ ಅವಳಿಗೆ ಹೆಚ್ಚಿನ ಅನುರಕ್ತಿಯಿದ್ದರೂ ಅರ್ಜುನನ ಪ್ರೀತಿ ಮತ್ತೀರ್ವರು ಸತಿಯರಿಗೆ ಹಂಚಿಹೋಗಿದೆ. ಭೀಮನಿಗೂ ಸಾಲಕಟಂಕಟಿಯೆಂಬ ಮತ್ತೊಬ್ಬ ಹೆಂಡತಿ. ದ್ಯೂತದಲ್ಲಿ ಸೋತ ಗಂಡನಿಂದಾಗಿ ದ್ರೌಪದಿ ಕುರುಸಭಾಮಧ್ಯದಲ್ಲಿ ಬೆತ್ತಲಾಗಬೇಕಾಗುತ್ತದೆ. "ಐವರಿಗೆ ಹೆಂಡತಿಯಾದವಳು ನಮಗೂ ಆಗಲಾರೆಯಾ?" ಎಂಬಂತಹ ಕೌರವರ ಕುಹಕದ ಮಾತುಗಳಿಗೆ ಕಿವಿಯಾಗಬೇಕಾಗುತ್ತದೆ. ನಂತರ ಗಂಡಂದಿರೊಂದಿಗೆ ವನವಾಸ-ಅಜ್ಞಾತವಾಸಗಳನ್ನನುಭವಿಸಬೇಕಾಗಿ ಬರುತ್ತದೆ.

ಈ ಮಧ್ಯೆ ಅರ್ಜುನನಿಗೆ ಇಂದ್ರಪುರಿಗೆ ಹೋಗುವ ಅವಕಾಶ ದೊರೆಯುತ್ತದೆ. ಅಲ್ಲಿ ಊರ್ವಶಿ ಅರ್ಜುನನಿಗೆ ಮನಸೋಲುತ್ತಾಳೆ. ಅರ್ಜುನನ್ನು ಸೇರಬಯಸುತ್ತಾಳೆ. "ಮನಸಿಜನ ಮಾರಾಂಕ ಕಾಮುಕ ಜನದ ಜೀವಾರ್ಥಕೆ ವಿಭುವೆಂದೆನಿಸಿದೂರ್ವಶಿ" ಅಂತಃಪುರದಲ್ಲಿ ನಡೆದು ಬರುವುದನ್ನು ವರ್ಣಿಸುವಾಗ ಕುಮಾರವ್ಯಾಸನಂಥ ಕುಮಾರವ್ಯಾಸನೇ "ಶಬ್ದಬ್ರಹ್ಮ ಸೋತುದು ಸೊರಹಲೇನೆಂದ" ಎನ್ನುತ್ತಾನೆ! ಹಾಗಾದರೆ ಅವಳ ರೂಪು-ಅಲಂಕಾರಗಳಾದರೂ ಹೇಗಿದ್ದಿರಬಹುದು?

ಪರಿಮಳದ ಪುತ್ಥಳಿಯೊ ಚೆಲುವಿನ
ಕರುವಿನೆರಕವೊ ವಿಟರ ಪುಣ್ಯದ
ಪರಿಣತೆಯೊ ಕಾಮುಕರ ಭಾಗ್ಯದ ಕಲ್ಪತರುಫಲವೊ
ಸ್ಮರನ ವಿಜಯಧ್ವಜವೊ ಮನ್ಮಥ
ಪರಮ ಶಾಸ್ತ್ರದ ಮೂಲಮಂತ್ರವೊ
ಸುರಸತಿಯರಧಿ ದೇವತೆಯೊ ವರ್ಣಿಸುವೊಡರಿದೆಂದ

ತಿಗುರ ಗೆಲಿದಳು ತಿಲಕವನು ತೆ
ತ್ತಿಗರಲಂಕರಿಸಿದರು ಹೊಳಹಿನ
ಹೊಗರ ಹೊಸ ಜವ್ವನದ ಜೋಡಿಯ ಜಾಡಿಯಿಮ್ಮಡಿಸೆ
ಉಗಿದೊರೆಯ ಕೂರಲಗೊ ಧಾರೆಯ
ಮಿಗೆ ಹಿಡಿದ ಖಂಡೆಯವೊ ಕಾಮನ
ಹಗೆಗೆ ಹುಟ್ಟಿದ ಧೂಮಕೇತುವೊ ರೂಪು ಸುರಸತಿಯ

ಆದರೆ ಪಾಂಡವರೈವರಲ್ಲೇ ಅತಿರಸಿಕನೆಂದು ಚಿತ್ರಿಸಲ್ಪಡುವ ಪಾರ್ಥ ಇಲ್ಲಿ ಊರ್ವಶಿಯ ಎದುರು ಸೋಲುತ್ತಾನೆ. ತನ್ನ ವಂಶವೃಕ್ಷದ ಪ್ರಕಾರ ನೀನು ತಾಯಿಯ ಸಮಾನ ಎಂದು ಗೋಗರೆಯುತ್ತಾನೆ. ಅವಮಾನಿತನಾಗಿ ವಾಪಸಾಗುತ್ತಾನೆ.

ಪಾಂಡವರು ವಿರಾಟನ ಆಸ್ಥಾನದಲ್ಲಿ ಅಜ್ಞಾತವಾಸದಲ್ಲಿದ್ದಾಗ ದ್ರೌಪದಿಯನ್ನು ಕಂಡಾಗ ಕೀಚಕನಿಗೆ ಅವಳ ಮೇಲೆ ಆಸೆಯುಂಟಾಗುತ್ತದೆ.

ನಿಂದು ನೋಡಿದ ದ್ರೌಪದಿಯ ಮೊಗ
ದಂದವನು ಕಂಡಾಗ ಕೀಚಕ
ನೊಂದನೆನೆ ಮೊಗ ತೆಗೆಯಲೆಚ್ಚನು ಕಾಮ ಕೈಗೂಡಿ
ಅಂದು ಬೆರಗಾದನು ವಿಳಾಸಿನಿ
ಯಿಂದು ತಳೆದಳು ಮನವನಿವಳಾ
ರೆಂದು ಭಾವಿಸಿ ಚಾಚಿದನು ಕದಪಿನಲಿ ಕರತಳವ

ತಿಳಿಯಿವಳು ಮೂಜಗದ ಮೋಹಿಪ
ತಿಲಕವೋ ಕಾಮಂಗೆ ಕಟ್ಟಿದ
ಕಳನ ಭಾಷೆಗೆ ನಿಂದ ಮಾಸಾಳೋ ಮಹಾದೇವ
ಕೊಲೆಗಡಿಗ ಕಂದರ್ಪಕನ ಕೂ
ರಲಗೊ ಮದನನ ಸೊಕ್ಕಿದಾನೆಯೊ
ನಳಿನಮುಖಿಯಿವಳಾರ ಸತಿಯೆಂದಳುಪಿ ನೋಡಿದನು

ಜಗವ ಕೆಡಹಲು ಜಲಜವಿಶಿಖನು
ಬಿಗಿದ ಬಲೆಯಿವಳಲ್ಲಲೇ ಯೋ
ಗಿಗಳ ಯತಿಗಳನೆಸಲು ಕಾಮನು ಮಸೆದ ಕೂರಲಗು
ಮುಗುದನಾದನು ಕಾಮನಂಬುಗ
ಳುಗಿದವೆದೆಯಲಿ ನಟ್ಟ ದೃಷ್ಟಿಯ
ತೆಗೆಯಲಾರದೆ ಸೋತು ಕೀಚಕ ಪಾತಕವ ನೆನೆದ

ನಂತರ ವಿರಾಟನನ್ನು ಭೀಮ ಕೊಲ್ಲುವುದು, ಪಾಂಡವರು ಅಜ್ಞಾತವಾಸ ಮುಗಿಸಿ ಬರುವುದು, ದುರ್ಯೋಧನ ರಾಜ್ಯವನ್ನು ಬಿಟ್ಟುಕೊಡದೆ ಯುದ್ಧಕ್ಕೆ ಆಹ್ವಾನಿಸುವುದು, ಕುರುಕ್ಷೇತ್ರದಲ್ಲಿ ಪಾಂಡವರು ವಿಜಯಿಗಳಾಗುವುದು..... ಯುದ್ಧದಲ್ಲಿ ಸೋಲೆಂತು ಗೆಲುವೆಂತು? ಪುತ್ರರು-ಬಂಧು-ಬಾಂಧವ-ಪ್ರಜೆ-ಸೈನ್ಯವನ್ನೆಲ್ಲ ಕಳೆದುಕೊಂಡ ಪಾಂಡವರು ಗೆದ್ದರೂ ಸೋತವರಂತೆ ಕಾಣುತ್ತಾರೆ. ಮಹಾಭಾರತ, ಧರ್ಮರಾಯನ ಪಟ್ಟಾಭಿಷೇಕದೊಂದಿಗೆ ಒಂದು ದುರಂತ ಕತೆಯಂತೆ ಮುಗಿತಾಯವಾಗುತ್ತದೆ.

ಆದರೆ ಕುಮಾರವ್ಯಾಸನ ಬಣ್ಣನೆಯಲ್ಲಿ ಭಾರತ ದೇಶದ ಈ ಮಹಾಕಾವ್ಯ ಮನೋಹರವಾಗಿ ಚಿತ್ರಿಸಲ್ಪಟ್ಟಿದೆ. ಅದನ್ನು ಓದುವ, ಅರ್ಥೈಸಿಕೊಳ್ಳುವ, ಖುಶಿಪಡುವ ಅದೃಷ್ಟ ನಮ್ಮದಾಗಲಿ.

2 comments:

vijayasheela said...

ಶತಮಾನಗಳ ಹಿಂದೆ ಓದುಬರಹ ಬಲ್ಲವರಿಗೂ ಮೇಲಾದ ಹಳೆಗನ್ನಡ ಭಾಷಾ-ಪಂಡಿತರಿಗೆ ಮಾತ್ರವೆನೊ ಅನಿಸುವವಂತೆ ರಚಿಸಲ್ಪಟ್ಟ ಮಹಾಸಾಹಿತ್ಯ ರತ್ನವೆನಿಸುವ ಮಹಾಗ್ರಂಥಗಳಲ್ಲಿ ಒಂದಾದ ಸಾಹಿತ್ಯಕಲಾಕೃತಿಯಾದ ಭಾಷಾಸಂವೃದ್ಧತೆ ಧರಿಸಿದ ಸಾಹಿತ್ಯಶೃಷ್ಟಿಪ್ರತ್ಯಕ್ಷತೆ "ಕುಮಾರವ್ಯಾಸರ ಮಹಾಭಾರತ"! ಆ ಗ್ರಮ್ಥದಲ್ಲಿ ಹುದುಗಿರುವ ಭಾಷೆಯ ಸಿರಿವಂತಿಕೆ ಪದವ್ಯೈಕರಿ ನುಡಿಸಂವೃದ್ಧಿ ಅತ್ಯಂತ ಮೇಲ್ಹಂತವಾದದ್ದು. ಆ ಭಾಷೆಯ ಪದಗಳ ಅರ್ಥ ತಾತ್ಪರ್ಯವನ್ನು ಅರಿತವರೆಷ್ಟುಮಂದಿ? ನವ ಶ್ವಚ್ಛಗನ್ನಡ ಅರಿತ ಇಂದಿನ ಕನ್ನಡ ಪ್ರೇಮಿಗಳಿಗೂ ಮತ್ತು ಸಾಹಿತ್ಯಬರಹಗಾರರಿಗೂ ಕಠಿಣವೆನಿಸುವ ಪದಾವಳಿ ಮತ್ತು ನುಡಿಸಂವೃದ್ಧಿ ಅತ್ಯಂತ ಹೆಚ್ಚಾಗಿರುವುದು - "ಕುಮಾರವ್ಯಾಸರ ಮಹಾಭಾರತ" ಗ್ರಂಥದಲ್ಲಿ! ಬಹಳಕಾಲಾಂಷ ಪರಭಾಷೆಯಂತೆ ಭಾವನೆಯಾಗುವುದು. ಆಷ್ಟು ರಸವತ್ತಾದ ಸೊಗಸಾದ "ಸರಸತಿರಧಿ ದೇವತೆಯೊ ವರ್ಣಿಸುವೊಡರಿದೆಂದ" ಗ್ರಂಥವನ್ನು ಓದಿಅರಿಯಲಾಗದ ಸ್ತಿಥಿಯ ಪರಿಸ್ಥಿತಿ ನಿಜವಾಗಿ ಒಂದು ದೊಡ್ಡ ನಷ್ಟದಂತೆ. ಆ ಕೃತಿಯ ಷಟ್ಪದಿಗಳ ಅಕ್ಕಪಕ್ಕದಲ್ಲಿ ಮಾತುಮಾತುಗಳ ಶಭ್ಧಕೋಶ ತಿಪ್ಪಣಿ ಹಾಕಿದ್ದರೆ ಎಲ್ಲಾ ಕನ್ನಡಿಗರೂ ಆ ಮಹಾಗ್ರಂಥವನ್ನು ಶಭ್ಕೋಶದ ಆಧಾರದೊಡನೆ ಪಠಿಸಿ ಓದೊಕೊಳ್ಳಲು ಓದಿ ಸಂತೋಷಪಡಲು ಸಾದ್ಯವಾಗುತ್ತಿತ್ತು. ಆಗಲೇ ’ಕುಮಾರವ್ಯಾಸ’ರ ರಚನೆಯ ಇಚ್ಛೆಯ ಸಮರ್ಥನೆ ಹೆಚ್ಚಾಗಿ ನೆರವೆರುತ್ತಿತ್ತು. ಅಂತಹ ಕನ್ನಡ-ಕನ್ನಡ ಪಕ್ಕದ-ಶಭ್ದಕೋಶ ನನಗೆ ಬಹಳ ಅವಶ್ಯಕವೆನಿಸುವುದು. - ವಿಜಯಶೀಲ.

g.mruthyunjaya said...

ಸಂಪೂರ್ಣ ಕುಮಾರವ್ಯಾಸಭಾರತವನ್ನು ಪ್ರತಿ ಪದ್ಯಕ್ಕೂ ಅರ್ಥವನ್ನು ನೀಡಿ ಶ್ರೀ ಅ.ರಾ.ಸೇತೂರಾಮರಾವ್ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ. ಮೂಲದ ಸ್ವಾರಸ್ಯವನ್ನು ಅದರ ಅರ್ಥದೊಂದಿಗೆ ಅರಿತು ಆನಂದಿಸಬಹುದು. ಪ್ರಕಾಶಕರು: ಕಾಮಧೇನು, ೫/೧,ನಾಗಪ್ಪ ರಸ್ತೆ, ಶೇಷಾದ್ರಿಪುರ, ಬೆಂಗಳೂರು-೫೬೦೦೨೦. ೧೩೧೫ ಪುಟಗಳ ಈ ಪುಸ್ತಕದ ಬೆಲೆ ರೂ.೧೮೦೦. ಬೆಲೆಯ ಬಗ್ಗೆ ಯೋಚಿಸುವಾಗ ಗ್ರಂಥದ ಗಾತ್ರವನ್ನೂ, ಲೇಖಕರ ಶ್ರಮವನ್ನೂ, ಗ್ರಂಥದ ಹಿರಿಮೆ ಗರಿಮೆಗಳನ್ನೂ ಪರಿಗಣಿಸಬೇಕಾಗುತ್ತದೆ.(ಇದರ ಬೆಲೆಯನ್ನು ಕಡಿಮೆಗೊಳಿಸುವ ಮಾರ್ಗಗಳಿದ್ದುವೆಮ್ಬುದು ಬೇರೆ ವಿಚಾರ)
ಅರಸುಗಳಿಗೆ ವೀರ, ದ್ವಿಜರಿಗೆ ಪರಮ ವೇದದ ಸಾರ, ಯೋಗೀಶ್ವರರ ತತ್ತ್ವವಿಚಾರ, ಮಂತ್ರೀಜನಕೆ ಬುದ್ಧಿಗುಣ, ವಿರಹಿಗಳ ಶೃಂಗಾರ, ವಿದ್ಯಾಪರಿಣತರ ಅಲಂಕಾರವಾಗಿ ಕಾವ್ಯಕೆ ಗುರುವಾದ ಈ ಕಾವ್ಯವನ್ನು ಸುಲಿದ ಬಾಳೆಯ ಹಣ್ಣಿನಂದದಿ ಸುಲಭಗೊಳಿಸಿ ನೀಡಿದ್ದಾರೆ. ನಾವು ಕೊಂಡು ಓದಬೇಕಷ್ಟೇ.