
ಶ್ಯಾಮಸುಂದರನಿಗೆ ಎಲ್ಲದೂ ಸರಿಯಾಗಿಯೇ ಇತ್ತು. ಸುಖ ಸಂಸಾರ, ಒಂದು ಪುಟ್ಟ ಮಗು, ಒಳ್ಳೇ ಕೆಲಸ. ಎಲ್ಲ ಚೆನ್ನಾಗಿದೆ ಅಂದುಕೊಂಡು ಒಂದು ಬೆಳಗ್ಗೆ ಎದ್ದು ಬಚ್ಚಲಿಗೆ ಬಂದ ಆತನಿಗೆ ತನ್ನ ಬಲ ಬೀಜ ಯಾಕೋ ನೀಲಿಯಾಗಿದೆ ಅನ್ನಿಸಿತು. ಮತ್ತೊಮ್ಮೆ ಸರಿಯಾಗಿ ನೋಡಿಕೊಂಡ - ಹೌದು, ನೀಲಿಯಾಗಿದೆ. ಏನು ಮಾಡುವುದೋ ತಿಳಿಯಲಿಲ್ಲ. ಹೆಂಡತಿಗೆ ಹೇಳಲು ಯಾಕೋ ಮುಜುಗರ ಅನ್ನಿಸಿತು. ಗಡಿಬಿಡಿಯಲ್ಲಿ ತಿಂಡಿ ತಿಂದು, ಮನೆ ಹತ್ತಿರದ ನರ್ಸಿಂಗ್ ಹೋಮ್ ಗೆ ಓಡಿದ.
ಅಲ್ಲಿನ ಡಾಕ್ಟರು ಹೊಸಬ. ಆತನಿಗೂ ಇದೇನು ಎಂದು ಹೊಳೆಯಲಿಲ್ಲ. ಆದರೆ ಮರ್ಯಾದೆ ಪ್ರಶ್ನೆ. ಮೈ ನೀಲಿಯಾಗುವುದು ವಿಷ ಪ್ರಾಶನ ಆದಾಗ ಎಂಬ ಸಿಂಪಲ್ ಸತ್ಯ ಗೊತ್ತಿತ್ತು ಅವನಿಗೆ. "ನೋಡಿ ಇವರೇ, ನಿಮಗೆ ಬಹಳ ಸೀರಿಯಸ್ ಇನ್ಫೆಕ್ಷನ್ ಆಗಿದೆ, ಲೇಸರ್ ಚಿಕಿತ್ಸೆ ಮಾಡಿ ಅದನ್ನ ತೆಗೆದು ಹಾಕುವುದೊಂದೇ ಉಳಿದ ದಾರಿ"ಎಂದ. ಶ್ಯಾಮಸುಂದರನಿಗೂ ಬೇರೆ ದಾರಿ ಉಳಿದಿರಲಿಲ್ಲ. ಆಪರೇಷನ್ ಗೆ ಹೂಂ ಅನ್ನಬೇಕಾಯಿತು. ಹೆಂಡತಿಗೆ ವಿಷಯ ತಿಳಿಸಿದ. ಆವತ್ತೇ ಮಧ್ಯಾಹ್ನದೊಳಗೆ ಆಪರೇಶನ್ ಕೂಡ ಆಗಿ, ಮಾರನೇ ದಿನ ಮತ್ತೆ ಮಾಮೂಲಿ ಮನುಷ್ಯನಾದ ಶ್ಯಾಮ.
ಹದಿನೈದು ದಿನ ಕಳೆದಿರಬಹುದು, ಉಳಿದೊಂದು ಎಡ ಬೀಜ ಕೂಡ ನೀಲಿಯಾಗಿತ್ತು! ಬಿಳಿಚಿದ ಮುಖ ಹೊತ್ತ ಶ್ಯಾಮಸುಂದರ, ಅದೇ ವೈದ್ಯರ ಬಳಿಗೆ ಮತ್ತೆ ಓಡಿದ. ಡಾಕ್ಟರಿಗೆ ತಲೆ ಕೆಟ್ಟಿತು! ಹೋದ್ಯಾ ಪಿಶಾಚಿ ಅಂದ್ರೆ.. ಗಾದೆ ನೆನಪಾಯಿತು. ಶ್ಯಾಮನನ್ನ ಕೂರಿಸಿ ಸಾಂತ್ವನ ಹೇಳಿದರು, "ನೋಡಿ, ನಿಮಗೆ ಮದುವೆಯಾಗಿದೆ, ಮಗು ಇದೆ, ಮುಂದೆ ಸಂತಾನವಾಗದೇ ಇದ್ದರೂ ತೊಂದರೆಯಿಲ್ಲ. ಆರೋಗ್ಯ ಮುಖ್ಯ.ತೆಗೆದು ಬಿಡೋಣ" ಅಂದರು. ಶ್ಯಾಮನಿಗೋ, ಕೋಲೇ ಬಸವನಂತೆ ತಲೆಯಾಡಿಸುವುದು ಬಿಟ್ಟು ಬೇರೆ ಭಾಗ್ಯವುಳಿದಿರಲಿಲ್ಲ.
ಇನ್ನೊಂದು ವಾರವಾಗಿದೆಯಷ್ಟೇ, ಅವನ "ಅದೂ" ನೀಲಿಯಾಯಿತು! ಶ್ಯಾಮನಿಗೆ ಬಿಕ್ಕಿ ಬಿಕ್ಕಿ ಅಳಬೇಕು ಅನ್ನಿಸಿತು. ಮನಸ್ಸು ಗಟ್ಟಿ ಮಾಡಿಕೊಂಡು ಸೀದಾ ನರ್ಸಿಂಗ್ ಹೋಮ್ ಗೆ ಬಂದ. ಡಾಕ್ಟರು ಇವನನ್ನ ನೋಡಿದವರೇ ಮತ್ತೇನು ಕಾದಿದೆಯಪ್ಪಾ ಅಂತ ಯೋಚಿಸುವಷ್ಟರಲ್ಲೇ ಅವರ ಕಾಲಿಗೇ ಬಿದ್ದು ಗೋಳೋ ಅಂತ ಅತ್ತು ಬಿಟ್ಟ ಅವನು. ತನ್ನ ಸಮಸ್ಯೆ ಬುಡಕ್ಕೇ ಕುತ್ತು ತಂದಿರುವುದನ್ನು ಹೇಳಿ ಏನಾದರೂ ಮಾಡಿ ಬಚಾವು ಮಾಡಬೇಕು ಅಂತ ಬೇಡಿಕೊಂಡ. ವೈದ್ಯ ಮಹಾಶಯನಿಗೆ ಸಮಸ್ಯೆ ಏನು ಅಂತ ಗೊತ್ತಿದ್ದರೆ ತಾನೆ ಬಚಾವು ಮಾಡುವುದು?! ಎಂದಿನಂತೆ ಪ್ರವಚನ ಆರಂಭಿಸಿದ- " ನಿಮ್ಮ ಜೀವ ಮುಖ್ಯ, ಇತರ ಅಂಗಗಳಿಗೆ ಹರಡಿ ಖಾಯಿಲೆ ಜೋರಾಗಿ ಪ್ರಾಣಕ್ಕೇ ಕುತ್ತು ಬರುವ ಬದಲು, ಉಳಿದ ಅದನ್ನೂ ತೆಗೆದು ಬಿಡೋಣ, ಕೃತಕವಾಗಿ ಏನಾದರೂ ಜೋಡಿಸಿದರಾಯಿತು,ಯಾರಿಗೂ ನಿಮ್ಮ ಊನ ತಿಳಿಯುವುದಿಲ್ಲ, ಸಾಮಾನ್ಯ ಮನುಷ್ಯರಂತೆಯೇ ಕಾಣುತ್ತೀರಿ" ಶ್ಯಾಮ ತನ್ನ ಜೀವಮಾನದಲ್ಲಿ ಮೊತ್ತ ಮೊದಲ ಬಾರಿಗೆ ಎರಡು ಬಾರಿ ಕುತ್ತಿಗೆ ಅಲ್ಲಾಡಿಸಿ ಹೂಂ ಅನ್ನಲು ೨ ನಿಮಿಷ ತೆಗೆದುಕೊಂಡ.
ಪ್ಲಾಸ್ಟಿಕ್ ಅಂಗ ಹೊತ್ತು ಮನೆಗೆ ತೆರಳಿದ ಶ್ಯಾಮಸುಂದರ. ಹತ್ತು ದಿನಗಳಾಗಿಲ್ಲ, ಒಂದು ಬೆಳಗ್ಗೆದ್ದು ನೋಡಿದಾಗ ಅವನ ಪ್ಲಾಸ್ಟಿಕ್ಕಿದ್ದೂ ನೀಲಿಯಾಗಿತ್ತು! ಹುಚ್ಚೇ ಹಿಡಿಯಿತು ಅವನಿಗೆ. ಉಟ್ಟ ಬಟ್ಟೆಯಲ್ಲೇ ಕಿತ್ತಾ ಬಿದ್ದು ವೈದ್ಯರಲ್ಲಿಗೆ ದೌಡಾಯಿಸಿದ. ಆತನ ಗಡಿಬಿಡಿ ನೋಡಿ ಮನೆಯಲ್ಲಿದ್ದ ಡಾಕ್ಟರಿಗೆ ಫೋನಿಸಲಾಯಿತು, ಅವರೂ ಓಡಿ ಬಂದರು. ಶ್ಯಾಮ ಮಾತಾಡುವ ಸ್ಠಿತಿಯಲ್ಲೂ ಇರಲಿಲ್ಲ, ಸುಮ್ಮನೇ ಅತ್ತ ಕಡೆ ಕೈ ತೋರಿಸಿದ ಅಷ್ಟೇ! ಅವರಿಗೆ ಮೈ ಪರಚಿಕೊಳ್ಳುವಂತಾಯಿತು. ಕೂಡಲೇ ತಮ್ಮ ಗುರುಗಳಿಗೆ ಫೋನು ಮಾಡಿ ಈ ಕೇಸನ್ನೂ, ಅದರ ಗಂಭೀರತೆಯನ್ನೂ ವಿವರಿಸಿ, ಬರುವಂತೆ ಕೋರಿದರು.
ಒಂದು ತಾಸು ಕಳೆಯುವುದರೊಳಗೆ ದೊಡ್ಡ ಡಾಕ್ಟ್ರ ಆಗಮನವಾಯಿತು. ಶಿಷ್ಯ ಸಮೇತರಾಗಿ ಶ್ಯಾಮನನ್ನ ಕರೆದುಕೊಂಡು ಕೋಣೆಯೊಂದಕ್ಕೆ ತೆರಳಿ ಹಾಸಿಗೆ ಮೇಲೆ ಮಲಗಿಸಿ - ಕನ್ನಡಕವೇರಿಸಿ ಸಮಸ್ಯೆಯನ್ನ ಕೂಲಂಕಷವಾಗಿ ಪರಿಶೀಲಿಸಿದ ಅವರು, ಗಂಭೀರವದನರಾಗಿ,
"ನಿಮ್ಮ ಚಡ್ಡಿ ಬದಲಿಸಿ, ಅದು ಬಣ್ಣ ಬಿಡುತ್ತಿದೆ" - ಅಂತಂದು ಅಲ್ಲಿಂದ ತೆರಳಿದರು.
[ನೋಟ್: ಇಲ್ಲಿ ಹಾಕಿರುವ ಚಿತ್ರ ಶ್ರೀ ಎಂ.ಎಸ್. ಮೂರ್ತಿಯವರ ಕುಂಚದಿಂದ ಅರಳಿದ್ದು. 'ಅವಧಿ'ಯಲ್ಲಿ 'ಮೋಟುಗೋಡೆ'ಯ ಬಗ್ಗೆ ಪ್ರಕಟವಾಗಿದ್ದ ವರದಿಯನ್ನೂ, ಮೋಟುಗೋಡೆಯ ಮಸ್ತ್ ಮಸ್ತ್ ಪೋಸ್ಟುಗಳನ್ನೂ ಓದಿ/ನೋಡಿ 'ಪ್ರೇರಿತ'ರಾದ ಅವರು ಮತ್ತೆ ಕುಂಚವನ್ನು ಕೈಗೆತ್ತಿಕೊಂಡಿರುವುದು ಬಹಳ ಬಹಳ ಖುಷಿಯ ವಿಷಯ. ಚಿತ್ರಕ್ಕಾಗಿ ಎಂ.ಎಸ್. ಮೂರ್ತಿಯವರಿಗೂ, 'ಅವಧಿ'ಗೂ ನಮ್ಮ ಕೃತಜ್ಞತೆ.]





